ವಿಜಯಪುರ: ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರಿಗೆ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು "ನನ್ನನ್ನು ಮುಗಿಸಲು ಏನೇನು ಕುತಂತ್ರ ಮಾಡಿದ್ದಾರೆ ಎನ್ನುವುದು ನನಗೆ ಚೆನ್ನಾಗಿ ಗೊತ್ತಿದೆ. ಸುಮ್ಮನೇ ಇದ್ದರೆ ಲೇಸು, ಎಲ್ಲಿಯಾದರೂ ಆಟ ಆಡಲು ಬಂದರೆ ನಮಗೂ ಆಟ ಆಡಲು ಬರುತ್ತದೆ’’ ಎಂದು ಎಚ್ಚರಿಕೆ ನೀಡಿದ್ದಾರೆ. ನಗರದಲ್ಲಿ ಸೋಮವಾರ ಸುದ್ದಿಗಾರರ ಪ್ರಶ್ವೆಗಳಿಗೆ ಉತ್ತರಿಸಿದ ಅವರು, ಎಂದಿನಂತೆ ಬಿವೈ ವಿಜಯೇಂದ್ರ ಮತ್ತು ಬಿಎಸ್ ಯಡಿಯೂರಪ್ಪ ಅವರ ವಿರುದ್ಧ ನೇರವಾಗಿಯೇ ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯರಪ್ಪ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಿರುದ್ಧ ಬಹಳ ದೊಡ್ಡ ಮಟ್ಟದಲ್ಲಿ ಅಸಮಾಧಾನದ ಅಲೆ ಇದೆ. ಇನ್ನು ಕೆಲವೇ ದಿನಗಳಲ್ಲಿ ಎಲ್ಲವೂ ಸ್ಱೋಟವಾಗಲಿದೆ. ಸೋತ ಎಂಪಿಗಳು ಹೇಳಿಕೆ ನೀಡಲು ಪ್ರಾರಂಭಿಸಿದ್ದಾರೆ. ಅಲ್ಲಲ್ಲಿ ಆಟಂಬಾಂಬ್ ಗಳು ಬೀಳ್ತಾ ಇವೆ. ದಾವಣಗೆರೆಯಲ್ಲಿ ನಿನ್ನೆ ಬಿದ್ದಿದೆ. ದಾವಣಗೆರೆ ಮುಗಿದ ಮೇಲೆ ಕೊಪ್ಪಳ ಬರ್ತದೆ, ಕೊಪ್ಪಳ ಮುಗಿದ ಮೇಲೆ ಬಳ್ಳಾರಿ, ಆಮೇಲೆ ರಾಯಚೂರು ಬರ್ತದೆ. ಎಲ್ಲೆಲ್ಲಿ ಸೋತಿದ್ದಾರಲ್ಲ, ಅದಕ್ಕೆ ಕಾರಣ ಯಾರು ಎನ್ನುವುದನ್ನು ವಿಜಯೇಂದ್ರನೇ ಹೇಳಬೇಕು. ಯತ್ನಾಳ್ ಹಿರಿಯರು ಎನ್ನುವ ಡೈಲಾಗ್ ಎಲ್ಲ ಬಿಟ್ಟುಹಾಕಿ. ನನ್ನ ಜೊತೆ ಆಟವಾಡಲು ಬಂದರೆ ನನಗೂ ಗೊತ್ತಿದೆ ಎಂದು ಸವಾಲು ಹಾಕಿದರು.
ಇದೇವೇೆಳೆ ಲೋಕಸಭಾ ಚುನಾವಣೆ ವೇಳೆ ಮುನಿಸಿಕೊಂಡು ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಪಕ್ಷೇತರರಾಗಿ ಸ್ಪರ್ಧಿಸಿದ್ದ ಮಾಜಿ ಉಪಮುಖ್ಯಮಂತ್ರಿ ಕೆಎಸ್ ಈಶ್ವರಪ್ಪ ಅವರನ್ನು ಮರಳಿ ಪಕ್ಷಕ್ಕೆ ಕರೆಸಿಕೊಳ್ಳುವಂತೆ ಅವರು ಒತ್ತಾಯಿಸಿದರು.
ಬಿಜೆಪಿಯ ಶುದ್ಧೀಕರಣ ಆಗಬೇಕಿದೆ. ಈಶ್ವರಪ್ಪನವರಿಗೆ ಅನ್ಯಾಯ ಮಾಡಿದರು. ಅವರು ಏನು ತಪ್ಪು ಮಾಡಿದ್ದರು. ಅರೋಪ ಬಂದಾಗ ರಾಜೀನಾಮೆ ಕೊಟ್ಟಿದ್ದರು. ಪ್ರಧಾನ ಮೆಂತ್ರಿಯವರ ಒಂದೇ ಮಾತಿಗೆ ಬೆಲೆ ಕೊಟ್ಟು ವಿಧಾನಸಭಾ ಚುನಾವಣೆಗೆ ಅವರು ನಿಂತರಲಿಲ್ಲ. ಪಕ್ಷಕ್ಕಾಗಿ ಕೆಲಸ ಮಾಡಿದರು. ಅದಕ್ಕೆ ಈಶ್ವರಪ್ಪ, ಒಳ್ಳೆಯವರನ್ನೆಲ್ಲಾ ಹೊರಗೆ ಹಾಕಿ ಇದು ಒಂದು ಕುಟುಂಬದ ಪಕ್ಷವಾಗಲು ನಾನು ಬಿಡೊಲ್ಲ.
ಇನ್ನು ಮುಡಾ ಹಗರಣಕ್ಕೆ ಸಂಬಂಧಿಸಿ ಬಿವೈ ವಿಜಯೇಂದ್ರ ಅವರ ಜೊತೆಗೆ ಸಿದ್ದರಾಮಯ್ಯ ವಿರುದ್ಧವೂ ಅವರು ಕಿಡಿಕಾರಿದರು. ಸಿದ್ದರಾಮಯ್ಯರಬ್ಬರನ್ನೇ ಟಾರ್ಗೆಟ್ ಮಾಡಬೇಡಿ. ಸಿದ್ದರಾಮಯ್ಯ ವಿರುದ್ಧ ಹೋರಾಟವಲ್ಲ. ಕಾಂಗ್ರೆಸ್ ವಿರುದ್ಧ ಹೋರಾಟ ಎಂದು ವಿಜಯೇಂದ್ರ ಅವರು ಹೇಳುತ್ತಾರೆ. ಹಾಗಿದ್ದರೆ ಸಿದ್ದರಾಮಯ್ಯ ಅವರು ಬಿಜೆಪಿಯಲ್ಲಿ ಇದ್ದಾರೇನು? ಎಂದು ಖಾರವಾಗಿ ಪ್ರಶ್ನಿಸಿದರು.
ವಾಲ್ಮಿಕಿ ನಿಗಮ ಹಗರಣದಲ್ಲಿ ನಾಗೇಂದ್ರ ಅವರು ರಾಜಿನಾಮೆ ತೆಗೆದುಕೊಂಡಿದ್ದಕ್ಕೆ ಅಭಿನಂದನೆ ಸಲ್ಲಿಸ್ತಾರೆ.. ನಾಗೇಂದ್ರ, ಹಾಗೂ ನಿಗಮದ ಅಧ್ಯಕ್ಷರನ್ನು ಸಚಿವ ಸಂಪುಟದಿಂದ ಕಿತ್ತು ಹಾಕಬೇಕಿತ್ತು. ಅಂದ್ರೆ ನಿಜವಾದ ಸಿದ್ದರಾಮಯ್ಯ ಅಂತ ಗೊತ್ತಾಗುತ್ತಿತ್ತು. ಸಿಬಿಐ ತನಿಖೆಯಿಂದಲೇ ಮಾತ್ರ ಇದೆಲ್ಲ ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಎಲ್ಲಾ ಪಾರ್ಟಿಯಲ್ಲಿದ್ದಾರೆ ಅಂತ ಸಚಿವ ಭೈರತಿ ಸುರೇಶ್ ಹೇಳ್ತಾರೆ,ತನಿಖೆ ಮಾಡಿ. ಸಿಬಿಐಗೆ ಕೊಡಿ. ಯಡಿಯೂರಪ್ಪ ಇದ್ದಾರೋ, ವಿಜಯೇಂದ್ರ ಇದ್ದಾರೆಯೋ ,ಅಕ್ಕನ ಮಕ್ಕಳಿದ್ದಾರೋ ,ರಾಜೀವ್ ಇದ್ದಾರೆಯೋ ಗೊತ್ತಾಗುತ್ತದೆ ಎಂದು ಮಾರ್ಮಿಕವಾಗಿ ಹೇಳಿದರು.