ಬೆಂಗಳೂರು: ಬಸವ ಪರಿಷತ್ ವತಿಯಿಂದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಹಿರಿಯರಿಗೆ ನೀಡುವ 'ಬಸವ ಪುರಸ್ಕಾರ' ಕ್ಕೆ ಹಿರಿಯ ಪತ್ರಕರ್ತ ಹನುಮೇಶ್ ಕೆ ಯಾವಗಲ್ ಆಯ್ಕೆ ಆಗಿದ್ದಾರೆ.
ಉದಯ ನ್ಯೂಸ್ ಚಾನಲ್ ಸೇರಿದಂತೆ ರಾಜ್ಯದ ವಿವಿಧ ದೃಶ್ಯ ಮಾಧ್ಯಮಗಳಲ್ಲಿ ಸುಮಾರು ಮೂವತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಹನುಮೇಶ್ ಕೆ ಯಾವಗಲ್ ಅವರು ರಾಜಕೀಯ ವಿಶ್ಲೇಷಕರು, ಮಾಧ್ಯಮ ಸಂಘಟಕರು ಹಾಗೂ ಸಮಾಜ ಸೇವಕರು ಕೂಡ ಆಗಿದ್ದಾರೆ.
ಹನುಮೇಶ್ ಕೆ ಯಾವಗಲ್ ಅವರ ನಿರಂತರ ಸೇವೆ ಗುರುತಿಸಿ ಈ ಬಾರಿಯ 'ಬಸವ ಪುರಸ್ಕಾರ' ಪ್ರಶಸ್ತಿಗೆ ಬಸವ ಪರಿಷತ್ ಆಯ್ಕೆ ಮಾಡಿದೆ.
ಇದೇ 15.6.2024ರ ಶನಿವಾರ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಬೃಹತ್ ಕೈಗಾರಿಕಾ ಸಚಿವ ಎಂ ಬಿ ಪಾಟೀಲ್ ಸೇರಿದಂತೆ ಹಲವು ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿರಲಿದ್ದಾರೆ ಎಂದು ಬಸವ ಪರಿಷತ್ ಮುಖ್ಯಸ್ಥ ಮಹಾಂತೇಶ ಹಿರೇಮಠ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ವೀ ಕೇ ನ್ಯೂಸ್ ಸುದ್ದಿ ಮಾಧ್ಯಮ ಬಳಗವು ಅಭಿನಂದನೆಗಳನ್ನು ಸಲ್ಲಿಸುತ್ತದೆ.