ನವದೆಹಲಿ: ಚುನಾವಣಾ ಆಯೋಗವು ಭಾರತದ ಚುನಾವಣಾ ಇತಿಹಾಸದಲ್ಲಿ ಚುನಾವಣೋತ್ತರ ಪತ್ರಿಕಾಗೋಷ್ಠಿ ಕರೆದಿರುವುದು ಇದೇ ಮೊದಲು. 2019ರ ಸಂಸತ್ ಚುನಾವಣೆ ವರೆಗೆ, ಪ್ರತಿ ಹಂತದ ಮತದಾನ ಮುಕ್ತಾಯದ ಬಳಿಕ ಉಪ ಚುನಾವಣಾ ಆಯುಕ್ತರು ಮಾಧ್ಯಮ ಸಂವಾದ ನಡೆಸುತ್ತಿದ್ದರು. ಇದೀಗ ಆಯೋಗವೇ ಪತ್ರಿಕಾಗೋಷ್ಠಿ ಕರೆದಿದ್ದು, ಹಿಂದಿನ ಸಂಪ್ರದಾಯ ನಿಲ್ಲಿಸಲಾಗಿದೆ.
ಲೋಕಸಭಾ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ನಾಳೆ (ಜೂನ್ 4ರಂದು) ಬೆಳಿಗ್ಗೆ 8ಕ್ಕೆ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು ಒಂದು ದಿನ ಮುಂಚಿತವಾಗಿ ಇಂದು ಮಧ್ಯಾಹ್ನ 12.30ಕ್ಕೆ ಪತ್ರಿಕಾಗೋಷ್ಠಿ ಕರೆದಿದೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ಆಯೋಗ, '2024ರ ಸಾರ್ವತ್ರಿಕ ಚುನಾವಣೆ ಕುರಿತು ಚುನಾವಣಾ ಆಯೋಗ ಪತ್ರಿಕಾಗೋಷ್ಠಿ ನಡೆಸಲಿದೆ' ಎಂದು ತಿಳಿಸಿದೆ.