# ಪ್ರಧಾನಿ ಮೋದಿ ಅವರ ಗಮನಕ್ಕೆ ವಿಷಯ ತರುವುದಾಗಿ ದ್ರೌಪದಿ ಮುರ್ಮು ಭರವಸೆ
# ಪಠ್ಯಕ್ರಮದಲ್ಲಿ ಭಾರತೀಯ ಸಂಸ್ಕೃತಿ ಬಿಂಬಿಸುವಂತಾಗಲಿ
# ಹಿಂದುಗಳ ರಕ್ಷಣೆಗೆ ನ್ಯಾಯಾಂಗ ವ್ಯವಸ್ಥೆ ಬಲಯುತವಾಗಲಿ
# ದೇವಾಲಯಗಳು ಸರ್ಕಾರದ ಹಿಡಿತದಿಂದ ದೂರವಾಗಲಿ
ಬೆಂಗಳೂರು: ಶ್ರೀಮನ್ ಮಧ್ವಾಚಾರ್ಯ ಮೂಲ ಮಹಾಸಂಸ್ಥಾನ ಉತ್ತರಾದಿ ಮಠದ ಮುಂಬೈ ಮಹಾನಗರ ಶ್ರೀಸತ್ಯಧ್ಯಾನ ವಿದ್ಯಾಪೀಠದ ಕುಲಪತಿಗಳು, ಕರ್ನಾಟಕದ ಪ್ರತಿಷ್ಠಿತ ರಾಜೋತ್ಸವ ಪ್ರಶಸ್ತಿ ಪುರಸ್ಕೃತರೂ ಆದ ಹಿರಿಯ ಪಂಡಿತ ಮಾಹುಲಿ ವಿದ್ಯಾಸಿಂಹಾಚಾರ್ಯ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಮಂಗಳವಾರ ಮಧ್ಯಾಹ್ನ ಭೇಟಿ ಮಾಡಿದರು.
ದೇಶದ ದೇವಾಲಯಗಳು ಸರಕಾರದ ಅಧೀನದಲ್ಲಿ ಇರುವ ಅಗತ್ಯ ಇಲ್ಲ. ಹಾಗಾಗಿ ದೇವಾಲಯಗಳನ್ನು ಸರಕಾರದ ಸುಪರ್ದಿಯಿಂದ ಹೊರಗಿಡಬೇಕು. ಭಾರತೀಯ ಸನಾತನ ಸಂಸ್ಕೃತಿಯ ಬಗ್ಗೆ ನಮ್ಮ ವಿದ್ಯಾರ್ಥಿಗಳಿಗೆ ತಿಳಿವಳಿಕೆ ನೀಡುವ ನಿಟ್ಟಿನಲ್ಲಿ ಪಠ್ಯಕ್ರಮ ಅಳವಡಿಸುವಂತಾಗಬೇಕು. ಎಂದು ಆಚಾರ್ಯರು ಮನವಿ ಮಾಡಿದರು.
ನ್ಯಾಯಾಂಗ ವ್ಯವಸ್ಥೆ ಬಲಯುತವಾಗಲಿ:
ಹಿಂದೂಗಳ ರಕ್ಷಣೆಯ ವಿಷಯದಲ್ಲಿ ನ್ಯಾಯಾಂಗ ವ್ಯವಸ್ಥೆ ಬಲಯುತವಾಬೇಕು ಹಾಗೂ ಈ ನಿಟ್ಟಿನಲ್ಲಿ ತ್ವರಿತ ಗತಿಯಲ್ಲಿ ಕ್ರಮ ಕೈಗೊಳ್ಳಬೇಕು. ದೇಶದ ಏಕತೆಗೆ ಮಾರಕವಾದ ವಿಚಾರ ಧಾರೆಗಳು ನ್ಯಾಯಾಂಗದ ಮೇಲೆ ಪ್ರಭಾವ ಬೀರುವಂತಾಬಾರದು ಎಂದು ಆಚಾರ್ಯರು ರಾಷ್ಟ್ರಪತಿಗಳಿಗೆ ತಿಳಿಸಿದರು.
ಭಾರತೀಯ ಸನಾತನ ಸಂಸ್ಕೃತಿ ಮತ್ತು ಹಿಂದುತ್ವದ ಬಗ್ಗೆ ಅಪಾರ ಗೌರವ ಹೊಂದಿದ ಮಾಹುಲಿ ಆಚಾರ್ಯರು ರಾಷ್ಟ್ರಪತಿಗಳೊಂದಿಗೆ ನಡೆದ ಭೇಟಿಯಲ್ಲಿ ಈ ವಿಷಯಗಳನ್ನು ಕುರಿತು ತಮ್ಮ ಅಭಿಪ್ರಾಯ, ನಿಲುವು ಗಳನ್ನು ವ್ಯಕ್ತಪಡಿಸಿದರು.
ಮೋದಿ ಗಮನಕ್ಕೆ ತರುವೆ: ಎಲ್ಲ ವಿಚಾರಗಳನ್ನೂ ಸಹೃದಯತೆಯಿಂದ ಆಲಿಸಿದ ರಾಷ್ಟ್ರಪತಿಗಳು ಮುಂದಿನ ಕ್ರಮಕ್ಕಾಗಿ ಈ ವಿಷಯವನ್ನು ಪ್ರಧಾನಿ ಮೋದಿ ಅವರ ಗಮನಕ್ಕೆ ತರುವುದಾಗಿ ತಿಳಿಸಿದರು.
ಇದೇ ಮೊದಲು: ವಿಪ್ರ ಪರಂಪರೆಯ ಹಿರಿಯ ವಿದ್ವಾಂಸರೊಂದಿಗೆ ರಾಷ್ಟ್ರಪತಿ ಮುರ್ಮು ಅವರು ಸವಿವರವಾಗಿ ಚರ್ಚಿಸಿ ಮಾತುಕತೆ ನಡೆಸಿದ್ದು ಇದೇ ಪ್ರಪ್ರಥಮ ಎಂದು ದಾಖಲಾಗಿದೆ.
ರಾಷ್ಟ್ರಪತಿಗಳಿಗೆ ಭಾರತದ ಸನಾತನ ಸಂಸ್ಕೃತಿಯ ಬಗ್ಗೆ ಇರುವ ಗೌರವ, ಈ ನೆಲದ ಧಾರ್ಮಿಕ ಅರಿವು ಮತ್ತು ಶ್ರದ್ಧೆಯ ಬಗ್ಗೆ ನನಗೆ ಅಪಾರ ಅಭಿಮಾನ ಮೂಡಿದೆ.
ಪಂಡಿತ ಮಾಹುಲಿ ವಿದ್ಯಾಸಿಂಹಾಚಾರ್ಯ , ಕುಲಪತಿ, ಮುಂಬಯಿ ವಿದ್ಯಾಪೀಠ