ಹೊಸದಿಲ್ಲಿ: ಬುದ್ಧಿಮಾಂದ್ಯರಿಗಾಗಿ ದಿಲ್ಲಿ ಸರಕಾರ ನಡೆಸುವ ಆಶ್ರಯಧಾಮ 'ಆಶಾಕಿರಣ'ದಲ್ಲಿ 7 ತಿಂಗಳಲ್ಲಿ ಇದುವರೆಗೆ 28 ಮಂದಿ ಮೃತಪಟ್ಟಿದ್ದಾರೆ. ಒಂದು ಮಗು ಸೇರಿದಂತೆ 14 ಮಂದಿ ಜುಲೈ ತಿಂಗಳಿನಲ್ಲಿಯೇ ಮೃತಪಟ್ಟಿದ್ದಾರೆ. ಈ ಸರಣಿ ಸಾವು ಹಲವು ಅನುಮಾನಗಳಿಗೆ ದಾರಿ ಮಾಡಿದ್ದು, ದಿಲ್ಲಿ ಸರಕಾರ ತನಿಖೆಗೆ ಆದೇಶಿಸಿದೆ. ಈ ಮಧ್ಯೆ, ಸರಣಿ ಸಾವುಗಳ ಬಗ್ಗೆ ದಿಲ್ಲಿ ಸರಕಾದ ಬಗ್ಗೆ ಕಿಡಿಕಾರಿರುವ ಬಿಜೆಪಿ, ಲೋಕಸಭೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸುವುದಾಗಿ ಹೇಳಿದೆ.
ಆರೈಕೆ ಕೇಂದ್ರದ ಸರಣಿ ಸಾವಿನ ವರದಿ ಬಳಿಕ ವಸ್ತು ಸ್ಥಿತಿ ಅಧ್ಯಯನಕ್ಕೆ ರಾಷ್ಟ್ರೀಯ ಮಹಿಳಾ ಆಯೋಗ ಸತ್ಯಶೋಧನಾ ಸಮಿತಿಯನ್ನು ರವಾನಿಸಿದೆ. ಆಶಾಕಿರಣ ಕೇಂದ್ರಕ್ಕೆ ಭೇಟಿ ನೀಡಲಿರುವ ಸಮಿತಿ, ಪರಿಸ್ಥಿತಿಯ ಅಧ್ಯಯನ ನಡೆಸಿ, ಆಯೋಗಕ್ಕೆ ವರದಿ ಸಲ್ಲಿಸಲಿದೆ. ಈ ಕುರಿತು ಪ್ರತಿಕ್ರಿಯೆ ನೀಡಿದ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ, ''ದಿಲ್ಲಿ ಸರಕಾರದ ನಿರ್ಲಕ್ಷ್ಯದಿಂದ ಆಶಾ ಕೇಂದ್ರದ ಜನರ ಜೀವನಕ್ಕೆ ಭರವಸೆ ಇಲ್ಲವಾಗಿದೆ. ಆಹಾರ, ಔಷಧ ಮತ್ತಿತರ ಅಗತ್ಯ ವಸ್ತುಗಳ ಕೊರತೆಯಿಂದ ಸಾವಿಗೀಡಾಗುತ್ತಿದ್ದಾರೆ. ಪರಿಸ್ಥಿತಿ ಅಧ್ಯಯನಕ್ಕೆ ನಮ್ಮ ತಂಡವನ್ನು ಕಳುಹಿಸಲಾಗಿದೆ,'' ಎಂದು ಹೇಳಿದರು.
ದಿಲ್ಲಿಯ ರೋಹಿಣಿ ಪ್ರದೇಶದಲ್ಲಿರುವ ಆಶ್ರಯಧಾಮದಲ್ಲಿ ಕಳೆದ ಜನವರಿಯಲ್ಲಿ ಮೂವರು ಮೃತಪಟ್ಟಿದ್ದರು. ಫೆಬ್ರವರಿಯಲ್ಲಿ ಇಬ್ಬರು, ಮಾರ್ಚ್ನಲ್ಲಿ ಮೂವರು ಮತ್ತು ಏಪ್ರಿಲ್ನಲ್ಲಿ ಇಬ್ಬರು ಮೃತರಾಗಿದ್ದರು. ಮೇನಲ್ಲಿ ಒಬ್ಬರು ಮತ್ತು ಜೂನ್ನಲ್ಲಿ ಮೂವರು ಕೊನೆಯುಸಿರೆಳೆದಿದ್ದರು. ಆದರೆ, ಜುಲೈನಲ್ಲಿ ಮಹಿಳೆ, ಮಗು ಸೇರಿದಂತೆ ಬರೋಬ್ಬರಿ 14 ಜನರು ಮೃತಪಟ್ಟಿದ್ದಾರೆ. ಇದರೊಂದಿಗೆ 7 ತಿಂಗಳಲ್ಲಿ ಮೃತಪಟ್ಟವರ ಸಂಖ್ಯೆ 28ಕ್ಕೆ ಏರಿದೆ. ಕಳೆದ ವರ್ಷವೂ ಜನವರಿ -ಜೂನ್ ನಡುವೆ 12 ಮಂದಿ ಬಲಿಯಾಗಿದ್ದರು.
ಸಾವುಗಳ ಸರಣಿ ಬಗ್ಗೆ ಕಳವಳ ವ್ಯಕ್ತಪಡಿಸಿರುವ ದಿಲ್ಲಿ ಸಚಿವೆ ಆತಿಶಿ ಅವರು, ಪ್ರಕರಣದ ಮ್ಯಾಜಿಸ್ಟ್ರಿಯಲ್ ತನಿಖೆ ನಡೆಸುವಂತೆ ಕಂದಾಯ ಇಲಾಖೆಗೆ ಸೂಚಿಸಿದ್ದಾರೆ. ಈ ಕುರಿತು 48 ಗಂಟೆಗಳಲ್ಲಿ ವರದಿ ನೀಡುವಂತೆ ಸೂಚಿಸಿದ್ದಾರೆ. ನಿರ್ಲಕ್ಷ್ಯ ಅಥವಾ ಬೇಜವಾಬ್ದಾರಿಯುತ ವರ್ತನೆಯಿಂದಾಗಿ ಈ ಸಾವುಗಳು ಸಂಭವಿಸಿದ್ದರೆ, ಆಡಳಿತಾತ್ಮಕ ಸಿಬ್ಬಂದಿ ಕಠಿಣ ಕ್ರಮ ಎದುರಿಸಲಿದ್ದಾರೆ ಎಂದು ಆತಿಶಿ ಎಚ್ಚರಿಕೆ ನೀಡಿದ್ದಾರೆ.
'ಆಶಾಕಿರಣ' ಆಶ್ರಯಧಾಮವು ದಿಲ್ಲಿಯ ಸಾಮಾಜಿಕ ಕಲ್ಯಾಣ ಇಲಾಖೆಯ ಅಡಿಯಲ್ಲಿದ್ದು, ಸಚಿವರಾಗಿದ್ದ ರಾಜ್ಕುಮಾರ್ ಆನಂದ್ ಅವರು ಆಪ್ ತೊರೆದು ಬಿಜೆಪಿ ಸೇರಿದ ಬಳಿಕ, ಈ ಇಲಾಖೆಯು ಸಚಿವರಿಲ್ಲದೆ ಅನಾಥವಾಗಿದೆ. ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮದ್ಯ ನೀತಿ ಹಗರಣದಲ್ಲಿ ಜೈಲು ಸೇರಿರುವ ಹಿನ್ನೆಲೆಯಲ್ಲಿ, ರಾಜ್ಕುಮಾರ್ ಆನಂದ್ ಸ್ಥಾನಕ್ಕೆ ಹೊಸ ಸಚಿವರ ನೇಮಕವಾಗಿಲ್ಲ.
ಆರೈಕೆ ಕೇಂದ್ರದಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚಿನ ಜನರಿಗೆ ಆಶ್ರಯ ನೀಡಲಾಗಿದೆ. 500 ಜನ ಇರುವ ಸ್ಥಳದಲ್ಲಿ 950 ಮಂದಿಗೆ ಅವಕಾಶ ನೀಡಲಾಗಿದೆ. ನಿವಾಸಿಗಳಿಗೆ ಸೂಕ್ತ ಪ್ರಮಾಣದ ಆಹಾರ, ನೀರು, ಔಷಧ ಸಿಗದೆ ಸೊರಗುತ್ತಿದ್ದಾರೆ ಎಂದು ಹೇಳಲಾಗಿದೆ.