ನವದೆಹಲಿ: ವಿರೋಧ ಪಕ್ಷಗಳ ಆಡಳಿತದಲ್ಲಿರುವ ರಾಜ್ಯಗಳ ವಿರುದ್ಧ ಕೇಂದ್ರ ಸರ್ಕಾರ ಬಜೆಟ್ ನಲ್ಲಿ ತಾರತಮ್ಯ ನೀತಿಯನ್ನು ತೋರಿಸಿದೆ ಎಂದು ಆರೋಪಿಸಿ ಇಂಡಿಯಾ ಬಣದ ನಾಯಕರು ಇಂದು ಬುಧವಾರ ಸಂಸತ್ತಿನ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
ನಮಗೆ ಇಡೀ ದೇಶಕ್ಕೆ ಸಂಬಂಧಪಟ್ಟ ಬಜೆಟ್ ಬೇಕು, ಎನ್ಡಿಎ ಬಜೆಟ್ ಅಲ್ಲ’, ‘ಬಜೆಟ್ನಲ್ಲಿ ಭಾರತಕ್ಕೆ ಎನ್ಡಿಎ ದ್ರೋಹ ಮಾಡಿದೆ ಎಂಬ ಫಲಕಗಳನ್ನು ಹಿಡಿದು ಪ್ರತಿಭಟನೆ ನಡೆಸಿದ ಸಂಸದರಿಂದ ‘ವಿರೋಧ ಪಕ್ಷಗಳ ವಿರೋಧಿ ಬಜೆಟ್, ಕುರ್ಚಿ ಬಚಾವೋ...ಬಜೆಟ್ ಮುರ್ದಾ ಬಾದ್’ ಎಂಬ ಘೋಷಣೆಗಳನ್ನು ಕೂಗಿದರು.
ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಮತ್ತು ಇತರ ಇಂಡಿಯಾ ಬ್ಲಾಕ್ ಸಂಸದರು ಸೇರಿದಂತೆ ವಿರೋಧ ಪಕ್ಷದ ನಾಯಕರು ಸಂಸತ್ತಿನ ಹೊರಗೆ ಪ್ರತಿಭಟಿಸಿದರು, ಕೇಂದ್ರ ಸರ್ಕಾರ ಫೆಡರಲ್ ವ್ಯವಸ್ಥೆಯಲ್ಲಿ ಎಲ್ಲಾ ರಾಜ್ಯಗಳಿಗೆ ಸಮಾನವಾಗಿ ಪರಿಗಣಿಸಬೇಕೆಂದು ಒತ್ತಾಯಿಸಿದರು.
"ಹಲವರಿಗೆ ಈ ಬಾರಿಯ ಕೇಂದ್ರ ಬಜೆಟ್ ನಲ್ಲಿ ನ್ಯಾಯ ಸಿಕ್ಕಿಲ್ಲ. ನಾವು ನ್ಯಾಯಕ್ಕಾಗಿ ಹೋರಾಡುತ್ತಿದ್ದೇವೆ. ಈ ಬಜೆಟ್ ಕೇವಲ ತಮ್ಮ ಮಿತ್ರರನ್ನು ತೃಪ್ತಿಪಡಿಸಲು ಮಾಡಿದ್ದೇ ಹೊರತು ಯಾರಿಗೂ ಏನೂ ಪ್ರಯೋಜನವಾಗಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ಮತ್ತು ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದರು. ರಾಜ್ಯಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಬಜೆಟ್ ಮಂಡನೆಗೆ ವಿರೋಧ ವ್ಯಕ್ತಪಡಿಸಿದರು.
ಈ ಬಜೆಟ್ ಜನವಿರೋಧಿಯಾಗಿದೆ, ಯಾರಿಗೂ ನ್ಯಾಯ ಸಿಕ್ಕಿಲ್ಲ, ವಿಶೇಷ ಪ್ಯಾಕೇಜ್ ಬಗ್ಗೆ ಮಾತನಾಡಿದ್ದಾರೆ ಆದರೆ ವಿಶೇಷ ಸ್ಥಾನಮಾನ ನೀಡಿಲ್ಲ, ಇದು ವಂಚನೆಯ ಬಜೆಟ್ ಮತ್ತು ಜನರಿಗೆ ಅನ್ಯಾಯ ಎಂದು ಖರ್ಗೆ ಆರೋಪಿಸಿದರು.