ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಭ್ರμÁ್ಟಚಾರ ನಡೆದಿದ್ದು, ಇದರ ವಿರುದ್ಧ ಹೋರಾಟ ಮುಂದುವರಿಸುತ್ತೇವೆ. ನಾಗೇಂದ್ರ ರಾಜೀನಾಮೆ ಕೊಟ್ಟಿದ್ದಾರೆ ಸರಿ. ಆದರೆ, ಪ್ರಕರಣ ಇಲ್ಲಿಗೆ ಮುಗಿದಿಲ್ಲ. ಅಧಿಕಾರಿ ಮೇಲೆ ಆರೋಪ ಹಾಕಿ ತೇಪೆ ಹಾಕಲು ಸಿಎಂ ಹೊರಟಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ಟೀಕಿಸಿದರು.
ಬೆಂಗಳೂರಿನಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ರಾಜ್ಯಾದ್ಯಂತ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ಹೊರಟಿದ್ದೇವೆ. ಬೆಲೆ ಏರಿಕೆಯಿಂದ ರೈತರ ಸಂಕಷ್ಟ ಹೆಚ್ಚಿದೆ. ಪೆಟ್ರೋಲ್, ಡೀಸೆಲ್, ಹಾಲಿನ ಬೆಲೆ ಎಲ್ಲಾ ಹೆಚ್ಚಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಡಿ.ಕೆ. ಶಿವಕುಮಾರ್ ಬಲಿ ಹಾಕಬೇಕು ಅಂತ ಡಿಸಿಎಂ ಹುದ್ದೆಗಳ ಹೆಚ್ಚಳ ವಿಚಾರ ತಂದರು. ಈಗ ಸಿದ್ದರಾಮಯ್ಯ ಬುಡಕ್ಕೆ ಬಂದಿದೆಯಲ್ವಾ? ಎಂದು ಪ್ರಶ್ನಿಸಿದರು. ಸಿದ್ದರಾಮಯ್ಯ ಎಷ್ಟು ದಿನ ಸಿಎಂ ಆಗಿರ್ತಾರೋ ಗೊತ್ತಿಲ್ಲ. ಬೆಲೆ ಏರಿಕೆ ಬಗ್ಗೆ ಮಾತಾಡಿದ್ರೆ ಸಚಿವರು ಉಡಾಫೆ ಮಾತನಾಡುತ್ತಾರೆ. ಕಾಂಗ್ರೆಸ್ ಆಡಳಿತದಿಂದ ವಿರುದ್ಧ ಜನ ಬೇಸತ್ತಿದ್ದಾರೆ. ಕಾಂಗ್ರೆಸ್ ಬಗ್ಗೆ ವಿಶ್ವಾಸ ಕಡಿಮೆಯಾಗಿದೆ ಎಂದರು.
ನಾಗೇಂದ್ರ ಆಪ್ತರ ಬೆದರಿಕೆ ಬಗ್ಗೆ ಆರೋಪಿ ಸತ್ಯನಾರಾಯಣ ವರ್ಮಾ ಕೋರ್ಟ್ನಲ್ಲಿ ಹೇಳಿಕೆ ಕೊಟ್ಟ ವಿಚಾರದ ಬಗ್ಗೆ ಉತ್ತರಿಸಿದ ಅವರು, ಸತ್ಯನಾರಾಯಣ ವರ್ಮಾ ಅವರು ಬಹಳ ಗಂಭೀರವಾದ ಆರೋಪ ಮಾಡಿದ್ದಾರೆ. ಆದರೆ ಇವತ್ತಿನವರೆಗೂ ನಾಗೇಂದ್ರರನ್ನು ಕರೆದು ಎಸ್ಐಟಿ ವಿಚಾರಣೆ ಮಾಡುವ ಧೈರ್ಯ ತೋರಿಸಿಲ್ಲ. ನಿನ್ನೆ ಕೋರ್ಟ್ ಕೂಡ ಸರ್ಕಾರಕ್ಕೆ ಛೀಮಾರಿ ಹಾಕಿದೆ ಎಂದು ನುಡಿದರು.
ಹೋರಾಟದ ದಿನಗಳು ಮುಂದಿವೆ..
ನಾಳೆ ಹಾಲಿನ ದರ ಏರಿಕೆ ಬಗ್ಗೆ ರೈತ ಮೋರ್ಚಾ ಹೋರಾಟ ಮಾಡುತ್ತಿದೆ ಎಂದು ಅವರು ವಿವರಿಸಿದರು. ನಮ್ಮ ಮುಂದೆ ಇರೋದು ಹೋರಾಟದ ದಿನಗಳು. ಮುಂದೆ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಕೆಲಸ ಮಾಡುತ್ತೇವೆ ಎಂದು ವಿಜಯೇಂದ್ರ ಅವರು ಎಚ್ಚರಿಸಿದರು.
ಒಂದೇ ವರ್ಷದಲ್ಲಿ ಸರ್ಕಾರ ಜನರ ವಿಶ್ವಾಸ ಕಳೆದುಕೊಂಡಿದೆ. ನಿನ್ನೆ ಸ್ವಾಮೀಜಿಗಳು ಡಿಕೆ ಶಿವಕುಮಾರ್ಗೆ ಸಿಎಂ ಸ್ಥಾನ ಕುರಿತು ಹೇಳಿಕೆ ಕೊಟ್ಟಿದ್ದಾರೆ. ಅದಕ್ಕೆ ಪ್ರತ್ಯುತ್ತರವಾಗಿ ಸಚಿವ ರಾಜಣ್ಣ ಅವರು ಉತ್ತರ ಕೊಟ್ಟಿದ್ದಾರೆ. ಇನ್ನೊಂದೆಡೆ ಸರ್ಕಾರ ಬದುಕಿದೆಯಾ ಎಂಬ ಪ್ರಶ್ನೆಯನ್ನು ಜನರು ಮುಂದಿಟ್ಟಿದ್ದಾರೆ. ಲೋಕಸಭಾ ಚುನಾವಣೆಗೂ ಮುಂಚೆ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಒಟ್ಟಿಗೆ ಕಾಣೋದು, ಇಬ್ಬರು ಪರಸ್ಪರ ತಿಂಡಿ ತಿನ್ನಿಸೋದು, ಹೆಗಲ ಮೇಲೆ ಕೈ ಹಾಕೋದು ನಡೆದಿತ್ತು. ನೋಡಿ ಈಗ ಒಬ್ಬರಿಗೊಬ್ಬರು ಬುಡ ಕುಯ್ದುಕೊಳ್ಳುವ ಕೆಲಸ ಮಾಡ್ಕೊಳ್ತಿದ್ದಾರೆ ಎಂದು ತಿಳಿಸಿದರು. ರಸ್ತೆಯಲ್ಲಿ ನಿಂತುಕೊಂಡು ಹೊಡೆದಾಡಿಕೊಳ್ಳುವ ಪರಿಸ್ಥಿತಿ ಬಂದಿದೆ. ಬರುವ ದಿನಗಳಲ್ಲಿ ಇನ್ನೂ ಏನೇನು ಆಗುತ್ತೆ ಕಾದು ನೋಡೋಣ ಎಂದು ಹೇಳಿದರು.
ನಾಗೇಂದ್ರ ರಾಜೀನಾಮೆ ಕೊಟ್ಟಿದ್ದಾರೆ ಎಂಬುದನ್ನು ನಾವು ಒಪ್ಪುತ್ತೇವೆ. ಆದರೆ, ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಎಸ್ಐಟಿ, ಮಾಜಿ ಮಂತ್ರಿಯನ್ನು ನೋಟಿಸ್ ಕೊಟ್ಟು ತನಿಖೆ ಮಾಡುತ್ತಿಲ್ಲ. ತೇಪೆ ಹಚ್ಚಿ ಸರ್ಕಾರವನ್ನು ಬಚಾವ್ ಮಾಡಲು ಅಧಿಕಾರಿಗಳು ಮಾಡಿದ್ದಾರೆ. ಇವತ್ತು ಅದಕ್ಕಾಗಿ ನಮ್ಮ ಕಾರ್ಯಕರ್ತರು ಎಲ್ಲಾ ಕಡೆ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಇದರ ಜೊತೆಗೆ ಹಾಸ್ಯಾಸ್ಪದ ಅಂದರೆ ಮೂರು ಡಿಸಿಎಂ ಹುದ್ದೆಗಳ ಕುರಿತು ಚರ್ಚೆ ನಡೆಯುತ್ತಿದೆ. ಡಿಕೆ ಶಿವಕುಮಾರ್ ರನ್ನು ಬಲಿ ಪಡೆಯÀಬೇಕು ಎಂದು ಸಿಎಂ, ಡಿಸಿಎಂ ಹುದ್ದೆಗಳ ಬಗ್ಗೆ ಸಚಿವರ ಮೂಲಕ ವಿಷಯ ಎತ್ತಿಸಿದ್ದಾರೆ. ಆದರೆ, ರಾಜ್ಯದ ಜನರ ಅಭಿವೃದ್ಧಿ ಸಮಸ್ಯೆ ಕೇಳುವವರೇ ಇಲ್ಲವಾಗಿದೆ ಎಂದು ತಿಳಿಸಿದರು.
3 ಕ್ಷೇತ್ರಗಳಲ್ಲೂ ಗೆಲುವು..
ಚನ್ನಪಟ್ಟಣದಿಂದ ತಮ್ಮ ಕುಟುಂಬದವರ ಸ್ಪರ್ಧೆ ಇಲ್ಲ ಎಂಬ ಡಿಕೆಶಿ ಟ್ವೀಟ್ ವಿಚಾರ ಕುರಿತ ಪತ್ರಕರ್ತರ ಪ್ರಶ್ನೆಗೆ, ಚನ್ನಪಟ್ಟಣದಿಂದ ಕಾಂಗ್ರೆಸ್ ಅಭ್ಯರ್ಥಿ ಯಾರು ಎಂಬುದು ನಮಗೆ ಮುಖ್ಯ ಅಲ್ಲ. ಅವರಿಂದ ಯಾರೇ ಅಭ್ಯರ್ಥಿ ಕಣಕ್ಕೆ ಇಳಿಸಿದರೂ, ಜೆಡಿಎಸ್ ನಾವು ಒಟ್ಟಾಗಿ ಚುನಾವಣೆ ಎದುರಿಸಿ ಗೆಲ್ಲುತ್ತೇವೆ ಎಂದು ವಿಜಯೇಂದ್ರ ಅವರು ತಿಳಿಸಿದರು.
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಏನು ಫಲಿತಾಂಶ ಬಂದಿದೆ ಎಂದು ಗೊತ್ತಿದೆ. ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು ಇವೆಲ್ಲವನ್ನೂ ಗೆಲ್ಲಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಾವು ಶೀಘ್ರದಲ್ಲೇ ಕೋರ್ ಕಮಿಟಿ ಸಭೆ ಕರೆಯುತ್ತಿದ್ದೇವೆ. ಅಲ್ಲಿ ಅಭ್ಯರ್ಥಿಗಳ ಆಯ್ಕೆ ಮತ್ತು ಸರ್ಕಾರದ ವಿರುದ್ಧ ಹೋರಾಟದ ಬಗ್ಗೆ ಚರ್ಚೆ ಮಾಡುತ್ತೇವೆ ಎಂದು ಹೇಳಿದರು.