ಕೇಜ್ರಿವಾಲ್‌ಗೆ ಆಂಬುಲೆನ್ಸ್‌ ಕಳುಹಿಸಿದ ಬಿಜೆಪಿ ನಾಯಕ

VK NEWS
By -
0

 


ನವದೆಹಲಿ: ವೈದ್ಯಕೀಯ ಕಾರಣಗಳಿಂದ ಜಾಮೀನು ಅವಧಿ ವಿಸ್ತರಣೆ ಕೋರಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ವೈದ್ಯಕೀಯ ಪರೀಕ್ಷೆಗೆ ಆಸ್ಪತ್ರೆಗೆ ಕರೆದೊಯ್ಯಲು ಬಿಜೆಪಿ ನಾಯಕ ವಿಜಯ್ ಗೋಯಲ್ ಅವರು ಆಂಬುಲೆನ್ಸ್ ಕಳುಹಿಸಿದ್ದಾರೆ. ಮುಖ್ಯಮಂತ್ರಿ ಅವರ ಅಧಿಕೃತ ನಿವಾಸಕ್ಕೆ ಹೋಗುವ ಮಾರ್ಗ ಮಧ್ಯೆ ಆಂಬುಲೆನ್ಸ್ ಮತ್ತು ವಿಜಯ್ ಗೋಯಲ್ ಅವರನ್ನು ಪೊಲೀಸರು ತಡೆದಿದ್ದಾರೆ.

ದೆಹಲಿ ಅಬಕಾರಿ ನೀತಿ ಹಗರಣ ಸಂಬಂಧ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಬಂಧಿತರಾಗಿದ್ದ ಸಿಎಂ ಅರವಿಂದ ಕೇಜ್ರಿವಾಲ್ ಅವರಿಗೆ ಲೋಕಸಭೆ ಚುನಾವಣೆಗೆ ಪ್ರಚಾರ ಮಾಡಲು ಅನುಕೂಲವಾಗುವಂತೆ ಮೇ 10ರಂದು ಸುಪ್ರೀಂ ಕೋರ್ಟ್ 21 ದಿನಗಳ ಮಧ್ಯಂತರ ಜಾಮೀನು ನೀಡಿತ್ತು. ಏಳನೇ ಮತ್ತು ಕೊನೆಯ ಹಂತದ ಚುನಾವಣೆಯ ಬಳಿಕ ಜೂನ್ 2ರಂದು ಶರಣಾಗಬೇಕು ಎಂದು ನಿರ್ದೇಶಿಸಿತ್ತು.

ಪಿಇಟಿ–ಸಿಟಿ ಪರೀಕ್ಷೆ ಸೇರಿದಂತೆ ಕೆಲವು ವೈದ್ಯಕೀಯ ತಪಾಸಣೆಗಳಿಗೆ ಒಳಗಾಗಬೇಕಿರುವ ಕಾರಣ ತಮಗೆ ನೀಡಿರುವ ಮಧ್ಯಂತರ ಜಾಮೀನಿನ ಅವಧಿಯನ್ನು ಏಳು ದಿನಗಳ ಮಟ್ಟಿಗೆ ವಿಸ್ತರಿಸಬೇಕು ಎಂದು ಕೋರಿ ಮೇ 26ರಂದು ಕೇಜ್ರಿವಾಲ್ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. 

ಜನರ ಸಹಾನುಭೂತಿ ಗಳಿಸಲು ಕೇಜ್ರಿವಾಲ್ ಅವರು ಆರೋಗ್ಯ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ನಾಟಕ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಗೋಯಲ್, ಈ ಆಂಬುಲೆನ್ಸ್ ಕೇಜ್ರಿವಾಲ್ ಅವರನ್ನು ಯಾವುದೇ ಆಸ್ಪತ್ರೆಗೆ ಬೇಕಾದರೂ ಕರೆದೊಯ್ಯುತ್ತದೆ. ಅಲ್ಲಿ ಅವರ ಎಲ್ಲಾ ವೈದ್ಯಕೀಯ ಪರೀಕ್ಷೆಗಳನ್ನು ಎರಡು ಗಂಟೆಗಳಲ್ಲಿ ಮಾಡಬಹುದು ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.


Post a Comment

0Comments

Post a Comment (0)