ತಿರುವನಂತಪುರ: ಕೇಂದ್ರದಲ್ಲಿ ಸತತ ಮೂರನೇ ಬಾರಿಗೆ ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟವು ಅಧಿಕಾರಕ್ಕೆ ಬರಲಿದೆ ಎನ್ನುವ ಮತಗಟ್ಟೆ ಸಮೀಕ್ಷೆಗಳನ್ನು ಕಾಂಗ್ರೆಸ್ ನಾಯಕ ಶಶಿ ತರೂರ್ ತಳ್ಳಿ ಹಾಕಿದ್ದಾರೆ. ಮತಗಟ್ಟೆ ಸಮೀಕ್ಷೆಗಳು ಜನರ ನಿಜವಾದ ನಾಡಿಮಿಡಿತವಲ್ಲ. ಮತಗಟ್ಟೆ ಸಮೀಕ್ಷೆಗಳನ್ನು ಕಾಂಗ್ರೆಸ್ ಸಂದೇಹಾಸ್ಪದವಾಗಿ ನೋಡುತ್ತದೆ ಎಂದು ಹೇಳಿದ್ದಾರೆ. ಅಲ್ಲದೆ ಇಂಡಿಯಾ ಮೈತ್ರಿಕೂಟವು 295 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
‘ಮತಗಟ್ಟೆ ಸಮೀಕ್ಷೆಗಳನ್ನು ನಾವು ಸಂದೇಹಾಸ್ಪದವಾಗಿ ನೋಡುತ್ತೇವೆ. ನಾವು ದೇಶದಾದ್ಯಂತ ಪ್ರಚಾರ ಮಾಡಿದ್ದೇವೆ. ಜನರ ನಾಡಿಮಿಡಿತ ಏನೆಂಬುವುದರ ಬಗ್ಗೆ ನಮಗೆ ಮಾಹಿತಿ ಇದೆ. ಯಾವುದಾದರೊಂದು ಮತಗಟ್ಟೆ ಸಮೀಕ್ಷೆಯು ಕೇರಳದಲ್ಲಿ ಬಿಜೆಪಿ 7 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುತ್ತದೆ ಎಂದು ಹೇಳಿದರೆ, ಒಂದೋ ಅದು ಶಾಖಾಘಾತದಿಂದ ಬಳಲಿರಬೇಕು ಅಥವಾ ರಾಜ್ಯದ ಬಗ್ಗೆ ಗೊತ್ತಿಲ್ಲದವರಾಗಿರಬೇಕು’ ಎಂದು ಅವರು ವ್ಯಂಗ್ಯವಾಡಿದ್ದಾರೆ.
‘ಕೆಲವೊಂದಿಷ್ಟು ಮಾದರಿಗಳನ್ನು ತೆಗೆದುಕೊಂಡು ಮತಗಟ್ಟೆ ಸಮೀಕ್ಷೆ ನಡೆಸಲಾಗಿದೆ. ಅದು ವೈಜ್ಞಾನಿಕವಲ್ಲ’ ಎಂದು ಹೇಳಿದ್ದಾರೆ. ಅಲ್ಲದೆ ತಿರುವನಂತಪುರ ಕ್ಷೇತ್ರದಲ್ಲಿ ಸತತ ನಾಲ್ಕನೇ ಬಾರಿಗೆ ತಾವು ಗೆಲುವು ಸಾಧಿಸುವುದಾಗಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
‘ಕೆಲವೊಂದು ಮತಗಟ್ಟೆ ಸಮೀಕ್ಷೆಗಳು ಹಾಸ್ಯಸ್ಪದವಾಗಿದೆ. ಯಾವುದೋ ಒಂದು ರಾಜ್ಯದಲ್ಲಿ ಐದು ಕ್ಷೇತ್ರಗಳಿವೆಯೆಂದಾದರೆ ಅಲ್ಲಿ ಬಿಜೆಪಿ 6 ಕ್ಷೇತ್ರಗಳಲ್ಲಿ ಗೆಲ್ಲಲಿದೆ ಎಂದು ಸಮೀಕ್ಷೆಗಳು ಹೇಳಿವೆ’ ಎಂದು ತಮ್ಮ ವಾದವನ್ನು ಸಮರ್ಥಿಸಿಕೊಂಡಿದ್ದಾರೆ.