ಬೆಂಗಳೂರು ಜೂನ್ 3: ಮಂಗಳವಾರ (ಜೂನ್ 4) ರಂದು ಫಲಿತಾಂಶ ಹೊರಬೀಳಲಿದ್ದು ಪ್ರಬಲ ಪಕ್ಷಗಳ ಭವಿಷ್ಯ ನಿರ್ಧಾರವಾಗಲಿದೆ. ರಾಜ್ಯ ರಾಜಕಾರಣದಲ್ಲಿ ಈ ಬಾರಿ ಫಲಿತಾಂಶ ಹೇಗಿರಲಿದೆ ಎನ್ನುವ ಚರ್ಚೆಗಳು ಕಾಂಗ್ರೆಸ್ ಪಾಳಯದಲ್ಲಿ ನಡೆದಿವೆ. ಈ ಬಗ್ಗೆ ಭಾನುವಾರ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲೂ ಈ ವಿಚಾರವಾಗಿ ಮಾತುಕತೆಗಳು ನಡೆದಿವೆ. ಸಮೀಕ್ಷೆಗಳ ಬಗ್ಗೆ ಚರ್ಚೆ ಮಾಡಲಾಗಿದೆ.
ಸದ್ಯ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಇದೆ. ವಿಧಾನಸಭೆ ಚುನಾವಣೆ ಪೂರ್ವ ಕಾಂಗ್ರೆಸ್ ನೀಡಿದ ಭರವಸೆಗಳು ಜಾರಿಗೆ ಬಂದ ಬೆನ್ನಲ್ಲೇ ಈ ಬಾರಿ ಲೋಕಸಭಾ ಚುನಾವಣೆಯಲ್ಲೂ ಕಾಂಗ್ರೆಸ್ ಗೆಲ್ಲುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಹಾಗಾಗಿ ಸೋಲು ಗೆಲುವಿನ ಲೆಕ್ಕಾಚಾರಗಳು ನಡೆಯುತ್ತಿವೆ. ಈ ವೇಳೆ ಸಿಎಂ ಸಿದ್ದರಾಮಯ್ಯ ಅವರು ಸಮೀಕ್ಷೆಗಳ ಭವಿಷ್ಯ ನಿಜವಾಗಲು ಸಾಧ್ಯವಿಲ್ಲ ಬದಲಾಗಿ ಎರಡಂಕಿಯ ದಾಟುತ್ತೇವೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಜಾರಿಗೆ ತಂದ ಗ್ಯಾರಂಟಿಗಳು ಪಕ್ಷವನ್ನು ಗೆಲ್ಲಿಸಲಿವೆ ಎಂಬ ನಿರೀಕ್ಷೆಯಲ್ಲಿ ಹೈಕಮಾಂಡ್ ಇದೆ. ಆದರೆ ಸಮೀಕ್ಷೆಗಳು ಬೇರೆಯದ್ದೇ ಭವಿಷ್ಯ ನುಡಿದಿರುವುದರಿಂದ ಕಾಂಗ್ರೆಸ್ ಪಾಳಯದಲ್ಲಿ ಆತಂಕ ಶುರುವಾಗಿದೆ. ಜೂನ್ 1ರಂದು ಬಿಡುಗಡೆಯಾದ ಚುನಾವಣೋತ್ತರ ಸಮೀಕ್ಷಾ ವರದಿ ಪ್ರಕಾರ ಈ ಬಾರಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ. ಹೀಗಾದಲ್ಲಿ ಕಾಂಗ್ರೆಸ್ ಭಾರಿ ದೊಡ್ಡ ಅಘಾತ ಆಗೋದರಲ್ಲಿ ಅನುಮಾನವೇ ಇಲ್ಲ. ಒಂದು ವೇಳೆ ಕಾಂಗ್ರೆಸ್ ಎರಡಂಕಿಯಷ್ಟೂ ಸ್ಥಾನ ಹೆಚ್ಚಾಗಿ ಪಡೆಯದೇ ಇದ್ದಲ್ಲಿ ಸಿಎಂ ಬದಲಾವಣೆ ಮಾಡುವ ಮಾತುಗಳು ಕೈ ಪಾಳಯದ ಆಂತರಿಕ ವಲಯದಲ್ಲಿ ಕೇಳಿ ಬಂದಿವೆ ಎಂಬ ಮೂಲಗಳು ತಿಳಿಸಿವೆ. ಆದರೆ ಈ ವಿಚಾರ ಬಹಿರಂಗವಾಗಿ ಚರ್ಚೆಯಾಗಿಲ್ಲ.