BENGALURU : ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಆಹಾರ ಪದಾರ್ಥಗಳ ಪ್ಯಾಕ್ಟರಿಗೆ ಮಹೇಂದ್ರ ಬಲೋರೋ ಜೀಪ್ನಲ್ಲಿ ಹ್ಯುಮನ್ ರೈಟ್ಸ್ ಪ್ರೋಟೆಕ್ಷನ್ ಕಮಿಟಿ ಮತ್ತು ಆ್ಯಂಟಿ ಕರಪ್ಶನ್ ಕಮಿಟಿ ಎಂಬ ಹೆಸರಿನ ನಾಮ ಫಲಕವಿರುವ ವಾಹನದಲ್ಲಿ ಇಬ್ಬರು ವ್ಯಕ್ತಿಗಳು ಬಂದಿರುತ್ತಾರೆ. ನಂತರ ಪ್ಯಾಕ್ಟರಿಯಲ್ಲಿ ಕೆಲಸಗಾರರು ಕೂದಲಿಗೆ ರಕ್ಷಣೆ ಇರದ, ಯಾವುದೇ ರೀತಿಯ ಟೋಪಿಯನ್ನು ಧರಿಸದೆ ಕೆಲಸಮಾಡುತ್ತಿದ್ದು, ಈ ಬಗ್ಗೆ ಕೇಸು ಆಗುತ್ತದೆ ಎಂದು ಹೆದರಿಸಿ ₹ 15,000/- ಹಣಕ್ಕೆ ಬೇಡಿಕೆಯಿಟ್ಟು, ಪಿರ್ಯಾದಿಯಿಂದ ₹ 6000/- ಪಡೆದು ನಂತರ ದಿನಾಂಕ:20-03-2024 ರಂದು ಸದರಿ ವ್ಯಕ್ತಿಗಳು ಅದೇ ವಾಹನದಲ್ಲಿ ಬಂದು ಉಳಿದ ₹ 9000/- ಹಣವನ್ನು ಕೊಡಬೇಕೆಂದು ಹೆದರಿಸಿ, ಪಿರ್ಯಾದಿಯಿಂದ ₹ 4000/- ಪಡೆದಿರುತ್ತಾರೆ. ಸದರಿ ವ್ಯಕ್ತಿಗಳ ಮೇಲೆ ಅನುಮಾನ ಬಂದು ಪಿರ್ಯಾದಿಯು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿರುತ್ತದೆ.
ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಮೂರು ವ್ಯಕ್ತಿಗಳನ್ನು ವಶಕ್ಕೆ ಪಡೆದುಕೊಂಡು, ಅವರಿಂದÀ ₹ 1870/- ನಗದು ಹಣ, ಕೃತ್ಯಕ್ಕೆ ಉಪಯೋಗಿಸಿದ ಮಹೇಂದ್ರ ಬಲೋರೋ ಜೀಪ್ ಹಾಗೂ 3 ಮೊಬೈಲ್ಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.
ಪ್ರಕರಣದಲ್ಲಿ ಬೆಂಗಳೂರು ನಗರ, ಉತ್ತರ ವಿಭಾಗದ ಉಪ ಪೊಲೀಸ್ ಆಯುಕ್ತ ಸೈದುಲು ಅಡಾವತ್ ಮಾರ್ಗದರ್ಶನದಲ್ಲಿ, ಶ್ರೀಮತಿ ಮೇರಿ ಶೈಲಜ, ಎಸಿಪಿ, ಯಶವಂತಪುರ ಉಪ ವಿಭಾಗ ಮತ್ತು ಸೋಲದೇವನಹಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಹಾಗೂ ಅವರ ತಂಡ ವ್ಯಕ್ತಿಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.