ಮೈಸೂರು (ಮಾ.13): ಹಾಲಿ ಸಂಸದ ಪ್ರತಾಪ್ ಸಿಂಹ ಅವರಿಗೆ ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಕೈ ತಪ್ಪುವುದು ಬಹುತೇಕ ಖಚಿತ. ಮೈಸೂರು ಕೊಡಗು ಲೋಕಸಭಾ ಕ್ಷೇತ್ರಕ್ಕೆ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಗೆ ಬಿಜೆಪಿಯಿಂದ ಟಿಕೆಟ್ ಬಹುತೇಕ ಫಿಕ್ಸ್ ಆಗಿದೆ. ಸಂಸದ ಪ್ರತಾಪ್ ಸಿಂಹಗೆ ಬಿಜೆಪಿ ಟಿಕೆಟ್ ತಪ್ಪುವುದು ಬಹುತೇಕ ಖಚಿತ ಹಿನ್ನೆಲೆಯಲ್ಲಿ ಮೈಸೂರು ಕೊಡಗು ಕ್ಷೇತ್ರ ಜನತೆ ಪ್ರತಾಪ್ ಸಿಂಹ ಬೆಂಬಲಕ್ಕೆ ನಿಂತು ಟಿಕೆಟ್ ನೀಡಬೇಕೆಂದು ಒತ್ತಾಯಿಸುತ್ತಿದ್ದಾರೆ. ಮೈಸೂರಿನಲ್ಲಿಂದು ಸಾಲು ಸಾಲು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಕೊಲಂಬಿಯ ಏಷಿಯಾ ಆಸ್ಪತ್ರೆ ವೃತ್ತ, ಹಿನಕಲ್ ಫ್ಲೈ ಓವರ್, ಸಂಸದರ ಕಚೆರಿ ಬಳಿಯೂ ಪ್ರತಿಭಟನೆ ನಡೆಸಲು ಉದ್ದೇಶಿಸಲಾಗಿದ್ದು, ಏಕ ಕಾಲದಲ್ಲಿ ಎರಡು ಕಡೆ ಪ್ರತಿಭಟನೆಗೆ ಪ್ರತಾಪ್ ಸಿಂಹ ಅಭಿಮಾನಿಗಳು ಕರೆ ನೀಡಿದ್ದಾರೆ. ಹುಣಸೂರು ಪಟ್ಟಣದಲ್ಲೂ ಪ್ರತಾಪ್ ಸಿಂಹ ಪರ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಮೈಸೂರಿನಲ್ಲಿ ಪ್ರತಾಪ ಸಿಂಹ ಪರ ಪೋಸ್ಟರ್ ಅಭಿಯಾನ ಆರಂಭವಾಗಿದೆ. ಸರಣಿ ಪೋಸ್ಟರ್ಗಳ ಮೂಲಕ ಪ್ರತಾಪ ಸಿಂಹ ಪರ ಅಭಿಮಾನಿಗಳು ಬ್ಯಾಟಿಂಗ್ ನಡೆಸಿದ್ದಾರೆ.
ಬಡವರ ಮಕ್ಕಳು ಬೆಳೆಯಬಾರದಾ? ಮೈಸೂರು ಹೈವೇ ಮಾಡಿದಕ್ಕಾಗಿ ಟಿಕೆಟ್ ಇಲ್ವಾ? ಕಾಂಗ್ರೆಸ್ಸಿಗೆ ಟಕ್ಕರ್ ಕೊಟ್ಟಿದಕ್ಕೆ ಇಲ್ವಾ? ಟಿಪ್ಪು ರೈಲಿಗೆ ಒಡೆಯರ್ ಹೆಸರು ಇಟ್ಟಿದಕ್ಕೆ ಇಲ್ವಾ? ಅಭಿವೃದ್ಧಿ ಕೆಲಸ ಮಾಡಿದಕ್ಕೆ ಇಲ್ವಾ? ಒಕ್ಕಲಿಗ ಅನ್ನೋ ಕಾರಣಕ್ಕೆ ಟಿಕೆಟ್ ಕೊಡಲ್ವಾ? ಹಲವು ಪೋಸ್ಟರ್ಗಳ ಮೂಲಕ ಪ್ರತಾಪಸಿಂಹ ಪರ ಅಭಿಯಾನ ನಡೆಸಲಾಗುತ್ತಿದೆ.