ವಿಧಾನ ಸಭೆಯಿಂದ ತಿದ್ದುಪಡಿಯೊಂದಿಗೆ ಅಂಗೀಕೃತ ರೂಪದಲ್ಲಿರುವ 2025ನೇ ಸಾಲಿನ “ಕರ್ನಾಟಕ ಕರ್ನಾಟಕ ಕಿರು (ಮೈಕ್ರೋ) ಸಾಲ ಮತ್ತು ಸಣ್ಣ ಸಾಲ (ಬಲವಂತದ ಕ್ರಮಗಳ ಪ್ರತಿಬಂಧಕ) ವಿಧೇಯಕ”ವನ್ನು ಮಾನ್ಯ ಮುಖ್ಯಮಂತ್ರಿಗಳ ಪರವಾಗಿ ಮಾನ್ಯ ಕಾನೂನು, ನ್ಯಾಯ, ಮಾನವ ಹಕ್ಕುಗಳು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಇಲಾಖೆಯ ಸಚಿವರಾದ ಎಚ್. ಕೆ. ಪಾಟೀಲ್ ಅವರು ಮಂಡಿಸುತ್ತಾ, ಸಾಲಗಾರರ ಬಾಧೆಯಿಂದಾಗಿ ಆತ್ಮಹತ್ಯೆ ಮಾಡಿಕೊಳ್ಳುವವರ, ಊರು ಬಿಟ್ಟು ಹೋಗುವವರನ್ನು ತಡೆಯಲು ಹಾಗೂ ದೌರ್ಜನ್ಯಕ್ಕೆ ಒಳಗಾಗುವವರನ್ನು ರಕ್ಷಿಸುವ ದೃಷ್ಠಿಯಿಂದ ಈ ವಿಧೇಯಕವನ್ನು ತರುವುದರ ಮೂಲಕ ಸಕಾರ್ಕಾರವು ಅತ್ಯಂತ ಅಗತ್ಯವಾದ, ಅನಿವಾರ್ಯವಾದ ಹೆಜ್ಜೆ ಇಡಲು ಪ್ರಯತ್ನಿಸಿದೆ.
ಸಮಾಜದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗದಂತೆ, ಸಾಲಗಾರರಿಂದ ಸಾಕಷ್ಟು ಕಿರುಕುಳಕ್ಕೊ ಳಗಾಗುವವರನ್ನು ರಕ್ಷಿಸುವ ಉದ್ದೇಶದೊಂದಿಗೆ ಮಾನವ ಹಕ್ಕುಗಳನ್ನು ರಕ್ಷಣೆ ಮಾಡಲು, ಸಾರ್ವಜನಿಕರ ಹಿತ ಕಾಪಾಡಲು ಸುಗ್ರೀವಾಜ್ಞೆಯನ್ನು ತರಲಾಗಿತ್ತು. ಈ ಸುಗ್ರೀವಾಜ್ಞೆಯನ್ನು ಈಗ ವಿಧೇಯಕದ ಮೂಲಕ ತರಲಾಗಿದೆ. ಇದರಿಂದ ಪೊಲೀಸ್ ಇಲಾಖೆಯು ಇನ್ನಷ್ಟು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲು ಅನುಕೂಲವಾಗುವುದು ಹಾಗೂ ಈ ವಿಧೇಯಕದಲ್ಲಿ ಶಿಕ್ಷೆಯ ಪ್ರಮಾಣವನ್ನು 3 ವರ್ಷಗಳಿಂದ 10 ವರ್ಷಗಳಿಗೆ ಏರಿಸಲಾಗಿದೆ. ದಂಡವನ್ನು 5 ಸಾವಿರದಿಂದ 5 ಲಕ್ಷಗಳಿಗೆ ಏರಿಕೆ ಮಾಡಲಾಗಿದೆ. ಇದರಿಂದಾಗಿ ಅಮಾಯಕರ ಮೇಲೆ ಬಲವಂತವಾಗಿ ಆಗುವ ದಬ್ಬಾಳಿಕೆ ತಡೆಯಬಹುದು. ಆರ್.ಬಿ.ಐ. ಮೂಲಕ ನಿಯಂತ್ರಣಕ್ಕೊಳಪಡುವ ಕಾನೂನು ಬದ್ದ ನೋಂದಾಯಿತ ಮತ್ತು ನಿಯಂತ್ರಿತ ನಿಕಾಯಗಳಾದ ಬ್ಯಾಂಕುಗಳು (ಸಣ್ಣ ಹಣಕಾಸು ಬ್ಯಾಂಕುಗಳು, ಸ್ಥಳೀಯ ಪ್ರದೇಶದ ಬ್ಯಾಂಕುಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು ಮತ್ತು ವ್ಯವಹಾರ ಸಂಬಂಧಿತ ಬ್ಯಾಂಕುಗಳನ್ನು ಒಳಗೊಂಡು) ಕರ್ನಾಟಕ ಸಹಕಾರ ಸಂಘಗಳ ಅಧಿನಿಯ 1959 (1959ರ ಕರ್ನಾಟಕ ಅಧಿನಿಯಮ 11)ರಡಿ ನೋಂದಾಯಿತ ಎಲ್ಲಾ ಸಹಕಾರಿ ಬ್ಯಾಂಕುಗಳು ಮತ್ತು ಎಲ್ಲಾ ಸಹಕಾರ ಸಂಘಗಳು ಹಾಗೂ ಕರ್ನಾಟಕ ಸೌಹಾರ್ದ ಸಹಕಾರಿ ಅಧಿನಿಯಮ 1997 (2000ರ ಕರ್ನಾಟಕ ಅಧಿನಿಯಮ 17)ರಡಿ ನೋಂದಾಯಿತ ಎಲ್ಲಾ ಸೌಹಾರ್ದ ಸೊಸೈಟಿಗಳು ಮತ್ತು ಆರ್.ಬಿ.ಐ ನೊಂದಿಗೆ ನೋಂದಾಯಿತ ಎಲ್ಲಾ ಬ್ಯಾಂಕೇತರ ಹಣಕಾಸು ಕಂಪನಿಗಳು ಮತ್ತು ಗೃಹ ಹಣಕಾಸು ನಿಗಮಗಳಿಗೆ ಅನ್ವಯವಾಗತಕ್ಕದ್ದಲ್ಲ ಎಂದು ತಿಳಿಸಿ ವಿಧೇಯಕವನ್ನು ಪರ್ಯಾಲೋಚಿಸಲು ಸದನದಲ್ಲಿ ಕೋರಿದರು.
ವಿಧಾನ ಪರಿಷತ್ತಿನ ಸದಸ್ಯರಾದ ಕೆ.ಎಸ್. ನವೀನ್, ಐವಾನ್ ಡಿಸೋಜ, ಪ್ರದೀಪ್ ಶೆಟ್ಟರ್, ಸಿ.ಟಿ. ರವಿ, ಗೋವಿಂದರಾಜು, ಶ್ರೀಮತಿ ಉಮಾಶ್ರೀ, ಡಿ.ಎಸ್. ಅರುಣ್ ಎನ್. ರವಿಕುಮಾರ್, ಕೇಶವ ಪ್ರಸಾದ್, ಎಂ. ನಾಗರಾಜು, ಶ್ರೀಮತಿ ಬಲ್ಕೀಸ್ ಭಾನು, ಮತ್ತು ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರಾದ ಛಲವಾಧಿ ನಾರಾಯಣಸ್ವಾಮಿ ಅವರುಗಳು ಪರ್ಯಾಲೋಚಿಸಿದ ನಂತರ ಸದರಿ ವಿಧೇಯಕವು ಒಮ್ಮತದಿಂದ ಸದನದಲ್ಲಿ ಅಂಗೀಕಾರವಾಯಿತು.