ಬೆಂಗಳೂರು : ನರಸಿಂಹರಾಜ ಕಾಲೋನಿಯ ಬಿಎಂಶ್ರೀ ಕಲಾಭವನದಲ್ಲಿ ಬಿಎಂಶ್ರೀ ಪ್ರತಿಷ್ಠಾನದ ವತಿಯಿಂದ ಜ. 11 ರಂದು ಏರ್ಪಡಿಸಿದ್ದ ಶ್ರೀಮತಿ ರಂಗನಾಯಕಮ್ಮ ಮತ್ತು ಶ್ರೀ ಜಿ. ಸುಬ್ಬರಾವ್ ದತ್ತಿ ಕಾರ್ಯಕ್ರಮದ ಅಡಿಯಲ್ಲಿ ವಿದುಷಿ ಶ್ರೀಮತಿ ಭವಾನಿ ಎಂ. ರಾವ್ ಅವರು ನಾಡಿನ ಪ್ರತಿಷ್ಠಿತ ಕವಿಗಳಿಂದ ರಚಿಸಲ್ಪಟ್ಟ ಪ್ರಸಿದ್ಧ ಭಾವಗೀತೆಗಳನ್ನು ಪ್ರಸ್ತುತ ಪಡಿಸಿದರು.
ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟರ "ಜಯ ಜಯ ಜಯ ಕನ್ನಡ ರಾಜೇಶ್ವರಿ", ಬಿ.ಎಂ.ಶ್ರೀ. ಅವರ "ಕರುಣಾಳು ಬಾ ಬೆಳಕೆ",ಎಚ್.ಎಸ್. ವೆಂಕಟೇಶಮೂರ್ತಿ ಅವರ "ಎಲ್ಲಿಯ ನೀತಿ ಎಲ್ಲಿಯ ನೇಮ",ಜಿ.ಎಸ್. ಶಿವರುದ್ರಪ್ಪ ಅವರ "ಎಲ್ಲೋ ಹುಡುಕಿದೆ ಇಲ್ಲದ ದೇವರ " ಮತ್ತು "ಎದೆ ತುಂಬಿ ಹಾಡಿದೆನು", ನಿಸಾರ್ ಅಹಮದ್ ಅವರ "ಜೋಗದ ಸಿರಿ ಬೆಳಕಿನಲ್ಲಿ", ಕನಕದಾಸರ "ತೊರೆದು ಜೀವಿಸಬಹುದೇ ಹರಿ ನಿನ್ನ ಚರಣಗಳ" ಗೀತೆಗಳನ್ನು ಹಾಡಿದರು.
ಇವರ ಗಾಯನಕ್ಕೆ ಕೀ-ಬೋರ್ಡ್ ವಾದನದಲ್ಲಿ ಶ್ರೀ ಟಿ.ಎಸ್. ರಮೇಶ್ ಮತ್ತು ತಬಲಾ ವಾದನದಲ್ಲಿ ಶ್ರೀ ಶ್ರೀನಿವಾಸ ಕಾಖಂಡಕಿ ಸಾಥ್ ನೀಡಿದರು. ಪ್ರತಿಷ್ಠಾನದ ಹಸ್ತಪ್ರತಿ ವಿಭಾಗದ ಮುಖ್ಯಸ್ಥರಾದ ಶ್ರೀ ಗುರುಪ್ರಸಾದ್ ಸ್ವಾಗತಿಸಿದರು. ಗೌರವ ಕಾರ್ಯದರ್ಶಿ ಡಾ|| ಶಾಂತರಾಜು ವಂದನಾರ್ಪಣೆ ಮಾಡಿದರು.