ಬೆಂಗಳೂರು, ಜೂನ್.03: ಬಿಬಿಎಂಪಿಯಿಂದ ಗೋವಿಂದರಾಜ ನಗರ ವಿಧಾನಸಭಾ ಕ್ಷೇತ್ರದ ನಾಯಂಡಹಳ್ಳಿ ವಾರ್ಡ್ ನ ಪಂತರಪಾಳ್ಯದಲ್ಲಿ ಸುಮಾರು ಅಂದಾಜು 50 ಕೋಟಿ ರೂಪಾಯಿ ವೆಚ್ಚದಲ್ಲಿ ಡಾ. ಪುನೀತ್ ರಾಜ್ಕುಮಾರ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ನಿರ್ಮಿಸಿಲಾಗಿದೆ. 2023 ಮಾರ್ಚ್ನಲ್ಲಿ ಅಂದಿನ ಸಿಎಂ ಬಸವರಾಜ್ ಬೊಮ್ಮಯಿ ಮತ್ತು ಅಂದಿನ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಶಾಸಕ, ವಸತಿ ಸಚಿವ ವಿ.ಸೋಮಣ್ಣ, ಅಶ್ವಿನಿ ಪುನೀತ್ ರಾಜ್ಕುಮಾರ್ ಹಾಗೂ ರಾಘವೇಂದ್ರ ರಾಜ್ಕುಮಾರ್ ಅವರು ಈ ಆಸ್ಪತ್ರೆಯನ್ನು ಲೋಕಾರ್ಪಣೆ ಮಾಡಿದ್ದರು.
ಪುನೀತ್ ರಾಜ್ಕುಮಾರ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಹೆಸರಿಗಷ್ಟೇ ಆಸ್ಪತ್ರೆಯಾಗಿ ಉಳಿದಿದೆ. ಲೋಕಾರ್ಪಣೆಯಾಗಿ ಒಂದು ವರ್ಷ ಕಳೆದರೂ ಆಸ್ಪತ್ರೆ ಮಾತ್ರ ಇನ್ನೂ ಓಪನ್ ಆಗಿಲ್ಲ. ಬಡ ರೋಗಿಗಳಿಗೆ ಚಿಕಿತ್ಸೆಯೂ ಸಿಗ್ತಿಲ್ಲ. ಸದ್ಯ ಆಸ್ಪತ್ರೆಯಲ್ಲಿ ಎಸಿ ಫಿಟ್ಟಿಂಗ್ ಕೆಲಸದಿಂದ ಹೊರಭಾಗದಲ್ಲಿ ಆಸ್ಪತ್ರೆಯ ಮೇಲ್ಬಾಗದ ಗೋಡೆಗಳಲ್ಲಿ ಸಂಪೂರ್ಣ ಬಿರುಕು ಬಿಟ್ಟಿದೆ. ಆಸ್ಪತ್ರೆಯ ಸುತ್ತಮುತ್ತ ಕಸದ ವಾಸನೆ ಹರಡುತ್ತಿದೆ. ರಾತ್ರಿಯಾದ್ರೆ ಸಾಕು ಅಕ್ರಮದ ಅಡ್ಡೆ ಆಗ್ತಿದೆ ಅನ್ನೋ ಆರೋಪವಿದೆ.
ಸದ್ಯ ಕಾಂಗ್ರೆಸ್ ಸರ್ಕಾರ ಕಾಮಗಾರಿ ತಡೆ ಹಿಡಿದಿರುವ ಆರೋಪದಿಂದ ಇನ್ನೂ ಆರರಿಂದ ಏಳು ತಿಂಗಳು ಕಾಮಗಾರಿ ಪೂರ್ಣವಾಗೊಲ್ಲ ಅಂತ ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಒಟ್ನಲ್ಲಿ ಪುನೀತ್ ರಾಜ್ಕುಮಾರ್ ಮಲ್ಟಿ ಆಸ್ಪತ್ರೆಯ ಕ್ರೆಡಿಟ್ ತೆಗೆದುಕೊಳ್ಳಲು ಬಿಜೆಪಿ ಮತ್ತು ಕಾಂಗ್ರೆಸ್ ಈ ಆಸ್ಪತ್ರೆಯನ್ನು ಓಪನ್ ಮಾಡ್ತಿಲ್ಲ ಅನ್ನೋ ಮಾತುಗಳನ್ನು ಸ್ಥಳೀಯ ನಿವಾಸಿಗಳು ಹೇಳ್ತಿದ್ದು ಕೂಡಲೇ ರಾಜ್ಯ ಸರ್ಕಾರ ಈ ಬಗ್ಗೆ ಗಮನ ಹರಿಸಬೇಕಿದೆ. ಇಲ್ಲಾಂದ್ರೆ ಇಷ್ಟು ದೊಡ್ಡ ಆಸ್ಪತ್ರೆ ಪಾಳುಬಿದ್ದ ಕಟ್ಟಡವಾಗೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಕೋಟಿ ಕೋಟಿ ಖರ್ಚು ಮಾಡಿ ಕಟ್ಟಿದ ಆಸ್ಪತ್ರೆ ಯಾವ ಬಡ ರೋಗಿಗೂ ಅನುಕೂಲಕ್ಕೆ ಬರುವುದಿಲ್ಲ.
ಕೂಡಲೇ ಆಸ್ಪತ್ರೆ ಓಪನ್ ಮಾಡಿ ಬಡ ರೋಗಿಗಳಿಗೆ ಸಹಾಯ ಮಾಡಿ ಎಂದು ಪುನೀತ್ ಅಭಿಮಾನಿ ಗಳು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.