ಬೆಂಗಳೂರಿನ ಪ್ರಸಿದ್ಧ ನೃತ್ಯ ದಂಪತಿಗಳಾದ ಸೂರ್ಯ ಎನ್. ರಾವ್ ಮತ್ತು ಪ್ರಥಮಾ ಪ್ರಸಾದ್ ರಾವ್ ನೇತೃತ್ವದ ‘ಮಹಾ ಮಾಯಾ ಆರ್ಟ್ಸ್ ಫೌಂಡೇಶನ್ಸ್’ ಮತ್ತು ಸುರತ್ಕಲ್ಲಿನ ಖ್ಯಾತ ನೃತ್ಯಗುರು ವಿದ್ವಾನ್. ಕೆ. ಚಂದ್ರಶೇಖರ ನಾವಡ ಅವರ ಶ್ರೀ ನಾಟ್ಯಾಂಜಲಿ ಕಲಾ ಅಕಾಡೆಮಿ ಸಂಸ್ಥೆಯ 40 ರ ಸಂಭ್ರಮಕ್ಕಾಗಿ ಮಲ್ಲೇಶ್ವರದ ‘ಸೇವಾಸದನ’ ದಲ್ಲಿ ವಿಶೇಷ ಸಾಂಸ್ಕೃತಿಕ ಕಾರ್ಯಕ್ತಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಉದ್ಘಾಟನೆಯನ್ನು ಕರ್ನಾಟಕ ಕಲಾಶ್ರೀ ನೃತ್ಯಗುರು ಶ್ರೀಮತಿ ನಿರ್ಮಲಾ ಮಂಜುನಾಥ್ ನೆರವೇರಿಸಿದರು.
ಶುಭಾರಂಭಕ್ಕೆ ವಿದುಷಿ. ಪ್ರಥಮಾ ಪ್ರಸಾದ್ ರಾವ್ ಅವರಿಂದ ಏಕವ್ಯಕ್ತಿ ಕಥಕ್ ನೃತ್ಯ ಪ್ರದರ್ಶನ, ಚಂದ್ರಶೇಖರ ನಾವಡ ಅವರ ಮೋಹಕ ನಿರ್ದೇಶನದಲ್ಲಿ ಅವರ ಶಿಷ್ಯೆಯರಿಂದ ‘ ಸಂಭವಾಮಿ ಯುಗೇ ಯುಗೇ’ – ಡಿ.ಎನ್. ಶ್ರೀವತ್ಸ ವಿರಚಿತ ದಶಾವತಾರ ಅನನ್ಯ ನೃತ್ಯರೂಪಕ ಮತ್ತು ಅಯನಾ ಡ್ಯಾನ್ಸ್ ಕಂಪೆನಿ – ಬೆಂಗಳೂರು ಇವರಿಂದ ‘ಧೃವ’ – ಅತ್ಯದ್ಭುತ ನೃತ್ಯ ಝೇಂಕಾರ ಕಾರ್ಯಕ್ರಮಗಳು ಕಣ್ಮನ ತಣಿಸುವಂತೆ ಸುಮನೋಹರವಾಗಿ ಮೂಡಿ ಬಂದು ಸೇವಾಸದನ ಸಭಾಂಗಣ ತುಂಬಿ ತುಳುತ್ತಿದ್ದ ಕಲಾರಸಿಕರ ಅಪಾರ ಮೆಚ್ಚುಗೆ ಗಳಿಸಿತು. ಮೂರು ಬಗೆಯ ವಿಭಿನ್ನ ನೃತ್ಯವೈಭವ ಸ್ಮರಣೀಯ ಅನುಭವ ನೀಡಿತೆಂದರೆ ಅತಿಶಯೋಕ್ತಿಯಲ್ಲ.