ಧರ್ಮಸ್ಥಳ ವಿಚಾರದಲ್ಲಿ ಸರ್ಕಾರ ಕಾನೂನು ಪ್ರಕಾರ ನಡೆದುಕೊಂಡಿಲ್ಲ: ಬಸವರಾಜ ಬೊಮ್ಮಾಯಿ
ಹಾವೇರಿ: ಧರ್ಮಸ್ಥಳ ಪ್ರಕರಣದಲ್ಲಿ ಈವರೆಗೆ ಏನೇನು ಆಗಿದೆಯೋ ಅದನ್ನು ಸರ್ಕಾರ ಬಹಿರಂಗ ಪಡಿಸಲಿ, ಅದನ್ನು ಮುಚ್ಚಿಟ್ಟುಕೊಳ್ಳುವುದು ಸರಿ ಅಲ್ಲ. ಜನರಿಗೆ ಸತ್ಯ ತಿಳಿಯಲಿ ಎಂಬುದೇ ನಮ್ಮ ಉದ್ದೇಶ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದಲ್ಲಿ ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಧರ್ಮಸ್ಥಳ ಪ್ರಕರಣದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ ಏನು ಹೇಳಿದ್ದಾರೆ ಎಂಬುದು ಗೊತ್ತಿಲ್ಲ. ಆದರೆ ಪ್ರಕರಣದಲ್ಲಿ ಈವರೆಗೆ ಏನೇನು ಆಗಿದೆ, ತನಿಖೆಯಲ್ಲಿ ಇತ್ತೀಚಿಗೆ ಏನು ಗೊತ್ತಾಗಿದೆ ಅದನ್ನು ಬಹಿರಂಗ ಪಡಿಸಬೇಕು. ಒಂದು ಧಾರ್ಮಿಕ ಕ್ಷೇತ್ರವನ್ನು ಇಷ್ಟು ಅವಹೇಳನಕಾರಿಯಾಗಿ ಅಪಪ್ರಚಾರ ಮಾಡಿರುವುದು ಇತಿಹಾಸದಲ್ಲೇ ಇಲ್ಲ. ಸರ್ಕಾರ ಇದಕ್ಕೆಲ್ಲಾ ಅವಕಾಶ ಮಾಡಿ ಕೊಟ್ಟಿದೆ. ಹುಡುಗಾಟ ಆಗಿ ಬಿಟ್ಟಿದೆ. ನಾಳೆ ಇನ್ನೊಬ್ಬರು ಇನ್ನೊಂದು ಹೇಳುತ್ತಾರೆ. ಜವಾಬ್ದಾರಿಯುತ ಸರ್ಕಾರ ಕಾನೂನು ಪ್ರಕಾರ ನಡೆದುಕೊಂಡಿಲ್ಲ. ಯಾರನ್ನೋ ಓಲೈಸಲು ಈ ರೀತಿ ಮಾಡ್ತಿದ್ದಾರೆ ಅಂತ ಆರೋಪ ಇದೆ ಎಂದು ದೂರಿದರು.
ಮುಸುಕುದಾರಿ ಯಾರು?
ಅನಾಮಿಕ ಮನುಷ್ಯ ಮುಸುಕುದಾರಿ ಯಾರು? ಏನು ಎಂಬುದನ್ನು ಬಹಿರಂಗ ಪಡಿಸಲಿ. ಕೂಡಲೇ ಸರ್ಕಾರ ಈ ಕೆಲಸ ಮಾಡಬೇಕು. ಇಲ್ಲದಿದ್ದರೆ ಧಾರ್ಮಿಕ ಕ್ಷೇತ್ರದ ಅಪಪ್ರಚಾರಕ್ಕೆ ಸರ್ಕಾರವೇ ಕುಮ್ಮಕ್ಕು ಕೊಟ್ಟಿದೆ ಅಂತ ಪುರಾವೆ ಆಗುತ್ತೆ ಎಂದ ಅವರು, ನಾನು ಮಂಪರು ಪರೀಕ್ಷೆಗೆ ಸಿದ್ಧನಿದ್ದೇನೆ ಅಂತ ಮುಸುಕುದಾರಿ ಮೊದಲೇ ಹೇಳಿದ್ದಾರೆ. ಅವನೇ ಸಿದ್ದ ಇದ್ದಾಗ ಮಂಪರು ಪರೀಕ್ಷೆ ಮಾಡಲು ಏನು ತೊಂದರೆ ಎಂದರು.
ಸೋನಿಯಾ ಗಾಂಧಿ ಉತ್ತರಿಸಲಿ
ಮಲ್ಲಿಕಾರ್ಜುನ ಖರ್ಗೆಯವರು ಕೇಂದ್ರ ಸರ್ಕಾರದ ವಿರುದ್ಧ ಹರ್ ಬೂತ್, ಮತ್ ಲೂಟ್ ಹೋರಾಟ ವಿಚಾರ ಕುರಿತಂತೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಯಾರು ಯಾರು ಲೂಟಿ ಮಾಡಿದ್ದಾರೆ ಸ್ಪಷ್ಟವಾಗಿದೆ. ಮೊದಲು ಸೋನಿಯಾ ಗಾಂಧಿ ಈ ಬಗ್ಗೆ ಉತ್ತರ ಕೊಡಲಿ ಎಂದು ಚಾಟಿ ಬೀಸಿದರು.
ರಾಹುಲ್ ಗಾಂಧಿ ಬಿಜೆಪಿ ವಿರುದ್ಧ ಮತಗಳವು ಆರೋಪಕ್ಕೆ ಪ್ರತಿಕ್ರಿಯಿಸಿ, ಕೆ.ಎನ್.ರಾಜಣ್ಣ ಸತ್ಯ ಹೇಳಿ ಮಂತ್ರಿ ಸ್ಥಾನ ಕಳೆದುಕೊಂಡಿದ್ದಾರೆ. ಕಾಂಗ್ರೆಸ್ ನಲ್ಲಿ ಸತ್ಯಕ್ಕೆ ಸ್ಥಳ ಇಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಸುಳ್ಳನ್ನು ನೂರ ಬಾರಿ ಹೇಳಿ ಸತ್ಯ ಅಂತ ಸಾಬೀತು ಮಾಡುವ ಅವರ ನಾಯಕ ರಾಹುಲ್ ಗಾಂಧಿ. ದ್ವಂದ್ವದಲ್ಲಿ ರಾಹುಲ್ ಗಾಂಧಿ ಸಿಕ್ಕಿ ಹಾಕಿಕೊಂಡಿದ್ದಾರೆ ಎಂದರು.
Veekay News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.